ಗೆಳೆಯ! ಗುಬ್ಬಚ್ಚಿ ಗೂಡಿನಲ್ಲಿ ನಮ್ಮ ಮಿಲನ
ಕುರಿಗೆಗೆ ಎಳಸಡ್ಡೆ ಕಟ್ಟಿ ಬಿತ್ತಿದ ನಿನ್ನ ಬೀಜ
ನನ್ನ ಹೊಲದಲ್ಲಿ ಹೆಣದಂತೆ ಮಲಗಿದ ಚೀಜ
ಎಕ್ಕಿ ಗಿಡದ ಅಜ್ಜ ಹಾರಿ ಬಂದು ಭುವಿಯಲ್ಲಿ ಸಂದ ಸಂಮೀಲನ.
ಕಾಯುತ್ತಿದ್ದೇನೆ ಚೈತ್ರ ಮಾಸದ ವಸಂತನ ಅಶ್ವಿನಿ ಮಳೆ
ನನ್ನ ನೆಲ ತೋಯ್ದು ಹೊಲ ನೆನೆದು ಮಲಗಿದ ಕಾಯ
ಮೊಳಕೆಯೊಡೆದು ಭುವಿ ಗರ್ಬವ ಸೀಳಿದ ಜಗದ ಮಾಯ
ಮರೆದುದು ಮರವಾದರೆ ಅಳವೆಲ್ಲ ಬೇರುಗಳ ವೈತ್ರದ ಕಲೆ.
ರೂಪಾಗ್ನಿಯಲಿ ರೂಹಿದ ಮೋಹದ ಇಳೆಯ ಬೆಳೆ
ಜೀವಕಳೆ ತುಂಬಿ ಕಣ್ಣ ಸೆಳೆಯುವ ಚುಂಬಕ ಮಾಟ
ಪ್ರೇಮಾಮೃತದ ಪೋಷಣೆ ಕರಳು ಬಳ್ಳಿಯ ಕಳ್ಳಿನಾಟ
ಸೌಂದರ್ಯಕ್ಕೆ ಪ್ರೇಮವೇ ಸಾಕ್ಷಿಕರಿಸಿದ ಪರಮಾತ್ಮದ ಹೊಳೆ.
ನನ್ನ ಕೋಶದಲ್ಲಿ ನಿನ್ನ ಜೀವಕೋಶದ ಜೀವ
ನಿತ್ಯ ನೂತನ ಪಾಡಾಗಿ ಹಾಡಲಿ ನವರಸದ ಭಾವ.
- ಡಾ. ಡಿ. ಬಿ. ಗವಾನಿ.